ಮಹಾ ಕುಂಭಮೇಳಕ್ಕೆ ತೆರಳಲು ಹಾಸನ ಜಿಲ್ಲೆಯ ನಾನಾ ಮಠಾಧೀಶರು, ನೂರಾರು ಮಂದಿ ಸಿದ್ಧತೆ

ಹಾಸನ : ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಜಿಲ್ಲೆಯಿಂದಲೂ ಸಹಸ್ರಾರು ಭಕ್ತರು ತೆರಳಲು ಸಜ್ಜಾಗಿದ್ದಾರೆ. ನಾನಾ ಮಠಾಧೀಶರು, ಅಧಿಕಾರಿಗಳು ಹಾಗೂ ರಾಜಕಾರಣಿಗಳು ಸೇರಿದಂತೆ ಸಾಮಾನ್ಯ ಭಕ್ತರು ಸಹ ತಂಡೋಪತಂಡವಾಗಿ ಹೋಗಲು ಈಗಾಗಲೇ ಟ್ರಾವೆಲ್‌ ಏಜೆನ್ಸಿ ಮೂಲಕ ಬುಕ್ಕಿಂಗ್‌ ಮಾಡಿಸಿದ್ದಾರೆ.


ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಕ್ಷೇತ್ರವಾದ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ ನಡೆಯುತ್ತಿದೆ. ಈ ಬಾರಿ ಜನವರಿ 13 ರಿಂದ ಫೆಬ್ರವರಿ 26 ರವರೆಗೆ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ ನಡೆಯುತ್ತಿದ್ದು, ಭಕ್ತ ಸಾಗರವೇ ಸೇರುತ್ತಿದೆ.

ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವ ಮೂಲಕ ಪುಣ್ಯದ ಅನುಭೂತಿಯನ್ನು ಪಡೆಯುವ ನಂಬಿಕೆ ಇದೆ. ಇಂತಹದ್ದೊಂದು ಸಂದರ್ಭಕ್ಕೆ ಸಾಕ್ಷಿಯಾಗುವ ಸಲುವಾಗಿ ಜಿಲ್ಲೆಯಿಂದಲೂ ತಂಡಗಳಾಗಿ ವಿಮಾನ, ರೈಲು ಅಥವಾ ಸ್ವಂತ ವಾಹನ ಇಲ್ಲವೇ ಬಾಡಿಗೆ ವಾಹನದಲ್ಲಿ ತೆರಳುತ್ತಿದ್ದು, ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ದ್ವಿಗುಣವಾಗುತ್ತಿದೆ. 144 ವರ್ಷದ ಬಳಿಕ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಪ್ರತಿನಿತ್ಯ ನೂರಾರು ಜನರು ತೆರಳುತ್ತಿದ್ದಾರೆ. ಮತ್ತೊಂದಿಷ್ಟು ಜನ ಟಿಕೆಟ್‌ ಬುಕ್ಕಿಂಗ್‌ ಮಾಡಿ ಕಾದು ಕುಳಿತಿದ್ದಾರೆ.

ಮಠಾಧೀಶರು, ಅಧಿಕಾರಿಗಳ ಸಿದ್ಧತೆ:

ಕುಂಭಮೇಳಕ್ಕೆ ತೆರಳಲು ನಾನಾ ಮಠಾಧೀಶರು ಹಾಗೂ ಹಿರಿಯ ಅಧಿಕಾರಿಗಳು ಸಹ ಸಿದ್ಧತೆ ಮಾಡಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಸತ್ಯಭಾಮ ಮತ್ತು ಕುಟುಂಬ ಕೂಡ ರಜೆ ದಿನದಲ್ಲಿ ತೆರಳಲು ಪ್ಲಾನ್‌ ಮಾಡಿಕೊಂಡಿದೆ. ಡಿಸಿ ಕಚೇರಿಯ ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡ ತಂಡಗಳಾಗಿ ರಜೆ ದಿನವನ್ನು ಆಯ್ಕೆ ಮಾಡಿಕೊಂಡು ತೆರಳುತ್ತಿದ್ದಾರೆ.

ಹಾಗೆಯೇ ಆದಿಚುಂಚನಗಿರಿ ಹಾಸನ ಶಾಖಾಮಠದ ಶ್ರೀಶಂಭುನಾಥ ಸ್ವಾಮೀಜಿ ಫೆಬ್ರವರಿಯಲ್ಲಿ ಶಿವರಾತ್ರಿ ವೇಳೆಗೆ ತೆರಳಲು ಪೂರ್ವ ಸಿದ್ಧತೆ ಮಾಡಿಕೊಂಡಿದ್ದಾರೆ. ಅರಕಲಗೂಡು ಅರೇಮಾದನಹಳ್ಳಿ ಮಠದ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ಜ. 28 ರಂದು ತೆರಳುತ್ತಿದ್ದಾರೆ.

ನೂರಾರು ಮಂದಿ ಪ್ರೇರಣೆ:

ಈಗಾಗಲೇ ಜ.13 ರಿಂದ ಈವರೆಗೆ ಜಿಲ್ಲೆಯ ಸಾವಿರಾರು ಭಕ್ತರು ಕುಂಭಮೇಳದಲ್ಲಿ ಪಾಲ್ಗೊಂಡು ವಾಪಸ್ಸಾಗಿದ್ದಾರೆ. ಅವರ ಅನುಭವ, ಉತ್ಸಾಹ ಹಾಗೂ ಅಚ್ಚುಕಟ್ಟಾದ ವ್ಯವಸ್ಥೆ ಕುರಿತು ಮೆಚ್ಚುಗೆಯ ಮಾತುಗಳಿಂದ ಪ್ರೇರಣೆಗೊಂಡು ಮತ್ತಷ್ಟು ಜನರು ಪ್ರಯಾಗರಾಜ್‌ಗೆ ತೆರಳಲು ಮುಂದಾಗಿದ್ದಾರೆ. ಹೀಗಾಗಿಯೇ ಜಿಲ್ಲೆಯಿಂದ ಪ್ರತಿನಿತ್ಯ 25 ಕ್ಕೂ ಹೆಚ್ಚು ಜನ ವಿಮಾನದಲ್ಲಿ ಪ್ರಯಾಣಿಸಿದರೆ, ಬೆಂಗಳೂರಿನಿಂದ ರೈಲಿನ ಮೂಲಕವೂ ಬುಕ್ಕಿಂಗ್‌ ಮಾಡಿಕೊಂಡು ನೂರಾರು ಜನ ತೆರಳುತ್ತಿದ್ದಾರೆ ಎನ್ನುತ್ತಾರೆ ಟ್ರಾವೆಲ್‌ ಏಜೆನ್ಸಿ ಮಾಲೀಕ ಹರೀಶ್‌.

ರಜೆಗೆ ದುಂಬಾಲು:

ಜಿಲ್ಲಾಧಿಕಾರಿ ಕಚೇರಿಯ ಹಲವು ಸಿಬ್ಬಂದಿ ಈಗಾಗಲೇ ರಜೆ ಪಡೆದು ಕುಂಭಮೇಳಕ್ಕೆ ಹೋಗಿ ಬಂದಿದ್ದರೆ, ಇನ್ನು ಕೆಲವರು ರಜೆಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯುತ್ತಿದ್ದಾರೆ. ಸರಕಾರಿ ಕಚೇರಿಗಳಲ್ಲಷ್ಟೇ ಅಲ್ಲ ಮಹಿಳಾ ಸಂಘಗಳು, ಪುರುಷರ ತಂಡಗಳು, ನಿವೃತ್ತರು ಕೂಡ ಕುಂಭಮೇಳಕ್ಕೆ ತೆರಳಲು ಮುಂದಾಗಿದ್ದಾರೆ.


ಮಹಾ ಕುಂಭಮೇಳದಲ್ಲಿ ಭಾಗವಹಿಸಲು ಫೆಬ್ರವರಿಯಲ್ಲಿ ಶಿವರಾತ್ರಿ ವೇಳೆಗೆ ತೆರಳಲು ನಿರ್ಧರಿಸಿ ಪೂರ್ವ ಸಿದ್ಧತೆ ಮಾಡಿಕೊಂಡಿದ್ದೇನೆ.

- ಶ್ರೀಶಂಭುನಾಥ ಸ್ವಾಮೀಜಿ, 

ಆದಿಚುಂಚನಗಿರಿ ಶಾಖಾಮಠ, ಹಾಸನ.

ಕುಂಭಮೇಳಕ್ಕೆ ತೆರಳಲು ನಿತ್ಯ ನೂರಾರು ಜನ ವಿಮಾನ ಟಿಕೆಟ್‌ ಬುಕ್ಕಿಂಗ್‌ಗೆ ಬರುತ್ತಿದ್ದಾರೆ. ಪ್ರಯಾಣ ವೆಚ್ಚ ದುಬಾರಿಯಾದರೂ ಜೀವನದಲ್ಲಿ ಅವಕಾಶ ಮಿಸ್‌ ಮಾಡಬಾರದು ಎಂದು ಬುಕ್ಕಿಂಗ್‌ ಮಾಡಿಸುತ್ತಿದ್ದಾರೆ.

- ಹರೀಶ್‌, 

ಟ್ರಾವೆಲ್ಸ್‌ ಏಜೆನ್ಸಿ ಮಾಲೀಕರು, ಹಾಸನ


Post a Comment

0 Comments