ಚನ್ನರಾಯಪಟ್ಟಣ: ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು

ಚನ್ನರಾಯಪಟ್ಟಣ: ಈಜಲು ತೆರಳಿದ್ದ ಇಬ್ಬರು ಯುವಕರು ವಾಪಸ್‌ ಬರಲು ಸಾಧ್ಯವಾಗದೆ ಮೃತಪಟ್ಟಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಜಿನ್ನಾಪುರ ಕೆರೆಯಲ್ಲಿ ಭಾನುವಾರ ನಡೆದಿದೆ.


ಶ್ರವಣಬೆಳಗೊಳದ ಗಣೇಶ್‌ (30) ಹಾಗೂ ರೋಹಿತ್ (28) ಎಂಬುವರು ಮೃತಪಟ್ಟಿದ್ದಾರೆ. ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ ಇಬ್ಬರು ಭಾನುವಾರ ರಜೆ ಹಿನ್ನಲೆಯಲ್ಲಿ ಕೆರೆಗೆ ಈಜಲು ತೆರಳಿದ್ದರು. ಇಬ್ಬರೂ ಈಜುಗಾರಿಕೆಯಲ್ಲಿ ನಿಪುಣರಾಗಿದ್ದರು. ಆದರೆ ರೋಹಿತ್‌ನ ಕಾಲಿಗೆ ಬಳ್ಳಿ ಸಿಕ್ಕಿ ಹಾಕಿಕೊಂಡಿದ್ದು ವಾಪಸ್‌ ಬರಲು ಸಾಧ್ಯವಾಗಿಲ್ಲ. ಸ್ನೇಹಿತನ ಚೀರಾಟ ಕೇಳಿಸಿಕೊಂಡ ಗಣೇಶ್‌ ಕಾಪಾಡಲೆಂದು ಹತ್ತಿರಕ್ಕೆ ಹೋದಾಗ ಆತನೂ ಬಳ್ಳಿಗೆ ಸಿಲುಕಿದ್ದು ಬಂಧನದಿಂದ ಬಿಡುಗಡೆಯಾಗಲು ಸಾಧ್ಯವಾಗಿಲ್ಲ. ಈ ಸಂಬಂಧ ಶ್ರವಣಬೆಳಗೊಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

0 Comments