ಅರಕಲಗೂಡು: ಎಲ್ಲ ಕ್ಷೇತ್ರದ ಉನ್ನತಿಗೆ ಮಹಿಳೆಯರೇ ಕಾರಣರಾಗುತ್ತಿದ್ದರೂ ಇಂದಿಗೂ ಹೆಣ್ಣು ಮಗು ಹುಟ್ಟಿದಾಕ್ಷಣ ಸಮಾಜ ನೋಡುವ ಮನಸ್ಥಿತಿ ಮಾತ್ರ ಬದಲಾಗದಿರುವುದು ಕಳವಳಕಾರಿ ಸಂಗತಿ ಎಂದು ಹಾಸನದ ಮಲೆನಾಡು ನಸಿರ್ಂಗ್ ಹೋಂನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಎ.ಸಾವಿತ್ರಿ ಆತಂಕ ವ್ಯಕ್ತಪಡಿಸಿದರು.
ತಾಲೂಕಿನ ರಾಮನಾಥಪುರದಲ್ಲಿ ಸ್ವಸ್ಥ ಸಮಾಜ ನಿರ್ಮಾಣ ಸಮಿತಿ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸೋಮವಾರ ಆಯೋಜಿಸಿದ್ದ ವಿವಿಧ ಕ್ಷೇತ್ರದ ಮಹಿಳಾ ಸಾಧಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕೌಟುಂಬಿಕವಾಗಿ ಮಾತ್ರವಲ್ಲದೆ ಮಹಿಳೆಯರು ಅನೇಕ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ಸ್ತ್ರೀ ಇಲ್ಲದ ಸಮಾಜವನ್ನು ಊಹಿಸಿಕೊಳ್ಳುವುದೂ ಕಷ್ಟ. ಇಂತಹ ಪರಿಸ್ಥಿತಿ ಎಲ್ಲರ ಅರಿವಿಗೆ ಬಂದಿದ್ದರೂ ಹೆಣ್ಣು ಮಗು ಜನಿಸಿದ ಕೂಡಲೇ ಸಂಭ್ರಮ ಪಡುವವರು ವಿರಳ ಎಂದರು.
ಹೆಣ್ಣು, ಗಂಡು ಮಗು ಜನನ ಪ್ರಕೃತಿ ನಿಯಮ. ಹೆರಿಗೆ ವೇಳೆ ಅನುಭವಿಸುವ ಯಾತನೆ ನೋಡಿ ಹೆಣ್ಣು ಮಗುವೆಂದು ತಿರಸ್ಕರಿಸುವ ಮನಸ್ಥಿತಿ ಬದಲಾಗಬೇಕು. ಕಾನೂನು ಮೀರಿ 18 ವರ್ಷದೊಳಗೆ ಹೆಣ್ಣು ಮಕ್ಕಳ ಮದುವೆ ಬೇಡ. ಅಲ್ಲದೆ ಮಹಿಳೆಯರು ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು. ನಿಯಮಿತವಾಗಿ ಲಸಿಕೆ ಪಡೆದು ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಲು ಸಹಕರಿಸಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಪುಷ್ಪಲತಾ, ಸಬ್ ಇನ್ಸ್ಪೆಕ್ಟರ್ ಕಾವ್ಯಾ ಮಾತನಾಡಿದರು. ತಾಲೂಕು ಕೃಷಿ ಸಹಾಯಕ ಅಧಿಕಾರಿ ಕೆ.ಜೆ. ಕವಿತಾ, ಸ್ವಸ್ಥ ಸಮಾಜ ನಿರ್ಮಾಣ ಸಮಿತಿ ಅಧ್ಯಕ್ಷ ಪ್ರದೀಪ್ ಇತರರಿದ್ದರು. ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಮಹಿಳೆಯರನ್ನು ಸನ್ಮಾನಿಸಲಾಯಿತು.



0 Comments