ಶುಂಠಿ ಬೆಲೆ ಕುಸಿತ, ಸರಕಾರ ಕ್ವಿಂಟಾಲ್ ಗೆ 7000 ರೂ ನಿಗಧಿ ಮಾಡುವಂತೆ ಎಡಿಸಿಗೆ ಮನವಿ

ಹಾಸನ: ಶುಂಠಿಯ ಮಾರುಕಟ್ಟೆ ದರ ತೀರಾ ಕುಸಿತವಾಗಿರುವುದರಿಂದ ಸರ್ಕಾರವು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಕ್ವಿಂಟಾಲ್ ಗೆ ೭೦೦೦ರೂ ಬೆಲೆ ನಿಗದಿ ಮಾಡಿ ಖರೀದಿ ಕೇಂದ್ರಗಳ ಮೂಲಕ ಖರೀದಿ ಮಾಡಿ ರೈತರನ್ನ ಆರ್ಥಿಕ ಸಂಕಷ್ಟದಿಂದ ಪಾರುಮಾಡಲು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ರಾಜ್ಯ ಶುಂಠಿ ಬೆಳೆಗಾರರ ಸಂಘದಿಂದ ಮಂಗಳವಾರದಂದು ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರಿಗೆ ಮನವಿ ಸಲ್ಲಿಸಿದರು.

ಇದೆ ವೇಳೆ ರಾಜ್ಯ ಶುಂಠಿ ಬೆಳೆಗಾರರ ಸಂಘದ ಭೋಮೇಶ್ ಮತ್ತು ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪ್ರವೀಣ್ ಗೌಡ ಮಾಧ್ಯಮದೊಂದಿಗೆ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಶುಂಠಿ ಬೆಳೆಗಾರರು ಎದುರಿಸುತ್ತಿರುವ ಬೆಲೆಕುಸಿತದ ಸಮಸ್ಯೆ ಬಗ್ಗೆ ವರದಿ ನೀಡಿ ನಮ್ಮ ಜಿಲ್ಲೆಯ ಶುಂಠಿ ಬೆಳೆಗಾರರ ನೆರವಿಗೆ ತಕ್ಷಣ ಧಾವಿಸುವಂತೆ ಮಾಡಬೇಕೆಂದು ಕೇಳಿಕೊಳ್ಳುತ್ತೇವೆ. ಇತ್ತೀಚಿನ ದಿನಗಳಲ್ಲಿ ಶುಂಠಿಯ ಮಾರುಕಟ್ಟೆ ದರದಲ್ಲಿ ಗಣನೀಯ ವ್ಯತ್ಯಾಸವಾಗಿ, ಬೆಲೆ ಕುಸಿತವಾಗಿದ್ದು, ಮಾರುಕಟ್ಟೆಯಲ್ಲಿ ಪ್ರಸ್ತುತ ಶುಂಠಿಯ ಬೆಲೆ ಪ್ರತಿ ಕ್ವಿಂಟಲ್ ಗೆ ೧೫೦೦-೨೦೦೦ರೂ ಗಳಿಗೆ ತಲುಪಿ ಉತ್ಪಾದನಾ ವೆಚ್ಚವು ಕೈ ಸೇರದಂತಾಗಿದೆ. ಇಂತಹ ಸಂದೀಗ ಪರಿಸ್ಥಿತಿಗಳಲ್ಲಿ ಉತ್ಪಾದಕ ರೈತನನ್ನು ಆರ್ಥಿಕ ಸಂಕಷ್ಟಗಳಿಂದ ಪಾರು ಮಾಡುವ ಸಲುವಾಗಿ ಹಲವಾರು

ಯೋಜನೆಗಳಿದ್ದು, ಅವುಗಳಲ್ಲಿ ಒಂದಾದ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಬೆಂಬಲ ಬೆಲೆ ನಿಗದಿ ಪಡಿಸಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ ರೈತರಿಂದ ನೇರವಾಗಿ ಉತ್ಪನ್ನವನ್ನು ಖರೀದಿಸುವ ಯೋಜನೆ ಇದಾಗಿದೆ ಎಂದರು. ಇತಿಹಾಸವನ್ನು ಗಮನಿಸಿದರೆ ೨೦೧೨. ಮತ್ತು ೨೦೨೩ ರಲ್ಲಿ ಗಮನಿಸಿದರೆ ಅರಿಶಿಣಕ್ಕೆ ಬೆಲೆ ಕುಸಿತವಾದಾಗ ಒIS ಯೋಜನೆಯನ್ನು ಜಾರಿ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ ಅಲ್ಲದೆ ೨೦೧೬-೧೭ ರಲ್ಲಿ ಬೆಲೆ ಕುಸಿತವಾದಾಗ ಅರುಣಾಚಲ ಪ್ರದೇಶದಲ್ಲಿ ಶುಂಠಿಯನ್ನು ಎಂಐಎಸ್ ಯೋಜನೆಯಡಿ ಖರೀದಿ ಮಾಡಲಾಗಿದೆ, ಅಲ್ಲದೆ ಮಿಜೋರಂ ನಲ್ಲಿ ಕನಿಷ್ಠ ಬೆಂಬಲ ಬೆಲೆಯಾಗಿ ೨೦೨೪ ರಲ್ಲಿ ೫೦೦೦ರೂ ಗಳನ್ನು ಪ್ರತಿ ಕ್ವಿಂಟಾಲ್ ಗೆ ನಿಗದಿ ಮಾಡಲಾಗಿದೆ ಎಂದು ಹೇಳಿದರು.

ಪ್ರಸ್ತುತ ಶುಂಠಿ ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ತಾವುಗಳು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜೊತೆ ತ್ವರಿತವಾಗಿ ವ್ಯವಹರಿಸಿ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯನ್ನು ಶೀಘ್ರದಲ್ಲೇ ಜಾರಿಯಾಗುವಂತೆ ಮಾಡಿ ಖರೀದಿ ಕೇಂದ್ರಗಳ ಮೂಲಕ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡಿ ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಸಹಕರಿಸುವಂತೆ ಕೋರಿದರು.

ಇದೆ ವೇಳೆ ಜಿಲ್ಲಾಧ್ಯಕ್ಷ ಪ್ರವೀಣ್, ರುಕ್ಮಾನಂದ್, ಪ್ರಕಾಶ್, ಪ್ರಭಾಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Post a Comment

0 Comments