ಆಲೂರು: ತಾಲೂಕಿನ ಕದಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಆಯ್ಕೆ ಚುನಾವಣೆಯಲ್ಲಿ ಹಾಸನ ಜಿಲ್ಲಾ ಎಚ್ ಡಿಸಿಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ ಸೇರಿ 12 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ 2025 ರಿಂದ 2030ನೇ ಸಾಲಿನ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಫೆ.23 ರಂದು ಚುನಾವಣೆ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಉಮೇದುವಾರಿಕೆ ಹಿಂಪಡೆ ಯಲು ಭಾನುವಾರ ಕೊನೇ ದಿನವಾಗಿತ್ತು. ಇಬ್ಬರು ಮಹಿಳಾ ಮೀಸಲು ಸ್ಥಾನಗಳಲ್ಲಿ ಸ್ಪರ್ಧೆ ಬಯಸಿ ಸುಮಿತ್ರಾ, ದ್ಯಾವಮ್ಮ ಜಯಂತಿ ಹಾಗೂ ಇಂದ್ರಮ್ಮ ಕಣದಲ್ಲಿದ್ದರು. ದ್ಯಾವಮ್ಮ ಇಂದ್ರಮ್ಮ ನಾಮಮಪತ್ರ ಹಿಂಪಡೆದಿದ್ದರಿಂದ ಸುಮಿತ್ರಾ ಮತ್ತು ಜಯಂತಿ ಇಬ್ಬರೂ ಅವಿರೋಧವಾಗಿ ಆಯ್ಕೆಯಾದರು. ಪ.ಪಂಗಡ ಮೀಸಲು ಸ್ಥಾನಕ್ಕೆ ತಿಮ್ಮಯ್ಯ ಅವರೊಬ್ಬರೇ ನಾಮಪತ್ರ
ಸಲ್ಲಿಸಿದ್ದರಿಂದ ಆಯ್ಕೆಯಾದರು. ಅಂತಿಮವಾಗಿ ಕಣದಲ್ಲಿ 31 ಜನ ಉಳಿದಿದ್ದರು. 19 ಮಂದಿ ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಕಬ್ಬಿನಹಳ್ಳಿ ಜಗದೀಶ್ ಬಣದ 11 ಜನ ಸಂಘದ ಸಾಲಗಾರರ ಕ್ಷೇತ್ರಕ್ಕೆ ಹಾಗೂ ಸಾಲಗಾರರಲ್ಲದ ಕ್ಷೇತ್ರಕ್ಕೆ ಒಬ್ಬರು ಆಯ್ಕೆಯಾದರು.
ನೂತನ ನಿರ್ದೇಶಕರಾಗಿ ಸಾಲಗಾರರ ಕ್ಷೇತ್ರದಿಂದ ಜಗದೀಶ್, ಗಂಗೇಗೌಡ, ದೇವರಾಜೇಗೌಡ, ರಂಗಸ್ವಾಮಿ, ಈರನಾಯಕ, ತಿಮ್ಮಯ್ಯ, ಸೋಮಶೇಖರ, ಕೇಶವಮೂರ್ತಿ, ಸುಮಿತ್ರಾ, ಜಯಂತಿ, ತಿಮ್ಮಯ್ಯ ಹಾಗೂ ನಾಗರಾಜ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ನಿರ್ವಹಿಸಿದ ಸಹಕಾರ ಸಂಘದ ಅಭಿವೃದ್ಧಿ ಅಧಿಕಾರಿ ಕುಮಾರ್ ತಿಳಿಸಿದರು.
ರಾಜಪ್ಪಗೌಡರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಲೋಕೇಶ್ , ಕೆ. ಆರ್. ಪ್ರವೀಣ್, ಮಲ್ಲೇಶಣ್ಣ, ಸಂಘದ ಕಾರ್ಯದರ್ಶಿ ರವಿಕಿರಣ್, ಸಿಬ್ಬಂದಿ ದಿಲೀಪ್ ಸೇರಿದಂತೆ ಕದಾಳು ಗ್ರಾಮಸ್ಥರು ಹಾಜರಿದ್ದರು



0 Comments